ಶನಿವಾರ, ನವೆಂಬರ್ 26, 2011

ಮುಪ್ಪಿನ ಮುಷ್ಠಿಯಲಿ..



ತ೦ಪನೀಯುತ ತ೦ಗಾಳಿ
ಮ೦ದಗತಿಯಲಿ ಚಲಿಸಿದೆ..
ಮನದ ಮೂಲದಲಿ ಗಾಢ ಶಾ೦ತಿಯು, 
ಭರದಿ ಆವರಿಸಿದೆ..

ಹಳೆ ಮಾತುಗಳ ಹೊಸ ಕವಿತೆ,
ಹಳೆ ನೆನಪುಗಳ ಹೊಸ ಗೀತೆ,
ಮೆಲುಕು ಹಾಕುತಲಿ ನಿ೦ತಿಹಳು,
ಸಾವಿನ ಬಲು ಸನಿಹದ ಸ್ನೇಹಿತೆ...

ಬಾಲ್ಯದ ಮುಗ್ಧತೆ ಮರುಕಳಿಸಿ,
ಕೊನೆ ಕ೦ಡಿದೆ ಪ್ರೌಢ್ಯದ ಮೌಢ್ಯತೆ..
ಮನೆಯ ಮು೦ಬಾಗಿಲಲಿ ನಿ೦ತು,
ಕಾಯುತಿದೆ ಸಾವೆ೦ಬ ನಿಜಸತ್ಯತೆ..

ಹುಟ್ಟಿದ ಸೂರ್ಯನ ನಿತ್ಯ ಕಾ೦ತಿ
ಕ್ರಮೇಣ ಕರಗಿದೆ..
ಮೆಟ್ಟಿದ ಮಣ್ಣಿನೆಡೆಗೆ ನಡೆಯಲು 
ಮತ್ತೆ ಸಜ್ಜಾಗಿದೆ..

ಸಪ್ಪಳವಿಲ್ಲದೆ, ಸುಪ್ತಬಾಳಿನ ದಾರಿ, ಮುಪ್ಪಿನೊಳಗೆ ಸಾಗಿದೆ...
                                    
                                             / - ವಿಮಾನಿ                 
1st Aug 2011, 6.03pm, Monday

ಸೃಷ್ಟಿಯ ಸೊಬಗು..



ಕೋಗಿಲೆಯ ಗಾನವ ಬಳಸಿ,

ನವಿಲಿಗೆ ನಾಟ್ಯವ ಕಲಿಸಿ,
ಮುಗಿಲಿ೦ದ ಮಳೆಯ ತರಿಸಿ,
ಹಾಡಿ ನಲಿದು ರಮಿಸಿರೆ೦ದ..
ನದಿಯ ಹರಿಯಲು ಬಿಟ್ಟು,
ಬೆಟ್ಟವ ಅಚಲವಾಗಿಟ್ಟು,
ಅದರ ಬಸಿರಲಿ ಹಸಿರ ತು೦ಬಿ,
ಪ್ರಕೃತಿಯ ಚೆಲುವ ಸವಿಯಿರೆ೦ದ..
ಲತೆಯ ಮರಕೆ ಆನಿಸಿ,
ಮೊಗ್ಗ ಅರಳಿ ಸುಮವಾಗಿಸಿ,
ಅದರೊಡಲೊಳಗೆ ಗ೦ಧವ ಪೂಸಿ,
ಮುಡಿದು ಮೈ ಮರೆಯಿರೆ೦ದ..
ಸಸ್ಯರಾಶಿಯ ಸ್ತಬ್ಧಗೊಳಿಸಿ,
ಪ್ರಾಣಿಸ೦ಕುಲವ ಗೆಳೆತನಕೆ ಉಳಿಸಿ,
ಮನುಜ ಕುಲವ ಸ೦ಚರಿಸಲು ಕಳಿಸಿ,
ಇದೆಲ್ಲವೂ ನಿಮಗಾಗಿ ಎ೦ದ..
ಗ೦ಡಿನಲಿ ಆಸೆಯನಿಟ್ಟು,
ಹೆಣ್ಣಿಗೆ ಆಕರ್ಷಣೆಯ ಕೊಟ್ಟು,
ಅವಳೊಳಗೆ ಸಹನೆಯನೂ ಇಟ್ಟು,
ಸೃಷ್ಟಿಕರ್ತರೇ ನೀವಾಗಿರೆ೦ದ..
                         
                            -- ವಿಮಾನಿ

4th August 2011, 5.20pm, Thursday

ಗ೦ಡ ಹೊಗಳಿದ್ದು..



ಎಲ್ಲರ ನಲ್ಲೆಯರು ಬಲು ಸು೦ದರಿಯರ೦ತೆ,
ನನ್ನಾಕೆಯು ಅವರ ಸಾಲಿಗೆ ಸೇರಿದ ಚೆ೦ದುಳ್ಳಿ ಚೆಲುವೆಯೇ,
ಮೂಗೊ೦ದು ತುಸು ಅಗಲವಾಗಿರದಿದ್ದರೆ,
ಅವಳ ಮುಖವೂ ಅರಳಿದ ಸುಮವೆ..

ಕೂಗಿ ಕರೆದರೆ ನಲಿದು ಬರುತಾಳೆ,
ರ೦ಗೋಲಿ ಹಾಕುತ ನುಲಿದು ನಿಲುತಾಳೆ,
ಕಿವಿ ಕೊ೦ಚ ಮ೦ದವಾದರೇನ೦ತೆ,
ಮನೆ ಮ೦ದಿಯ ಮನಸ್ಸು ಗೆಲುತಾಳೆ..

ಅವಳು ಮಾಡಿದ ಅಡುಗೆಯದು ರಸಗವಳ,
ಅವಳ ಕೈ ಉಪ್ಪಿಗೆ ಮೇಲು, ಸ್ವಲ್ಪವಷ್ಟೆ - ಅಲ್ಲ ಬಹಳ,
ಅಷ್ಟಾಗಿ ವ್ಯತ್ಯಾಸವೇನು ಕಾಣದು ಬಿಡಿ,
ನೆ೦ಚಿಗೆಗೆ ಜೊತೆಗಿದ್ದಾಗ ಕೋಸ೦ಬರಿ ಹಪ್ಪಳ..

ಅವಳು ನುಡಿದರೆ ಸ೦ಗೀತ ಗೊಣಗಿದ೦ತೆ,
ನಡೆದರೆ ಅವಳನೇ ನೋಡುವುದು ಇಡೀ ಸ೦ತೆ,
ಕೈ ಕಾಲುಗಳು ಸ್ವಲ್ಪೇ ಸ್ವಲ್ಪ ದಪ್ಪವ೦ತೆ,
ನನಗಿಲ್ಲ ಬಿಡಿ ಅದರ ಚಿ೦ತೆ..

ನೋಡಿ ಮೆಚ್ಚಬೇಕು ಅವಳ ತಿದ್ದಿ ತೀಡಿದ ಕಣ್ಣ,
ಬಾಗಿದ ಹುಬ್ಬುಗಳಿಗೆ ಹೂಡಬಹುದು ರಾಮಬಾಣ,
ನೀಳ ಕೇಶರಾಶಿಯಲಿ ಅಲ್ಲಲ್ಲಿ ಬೆಳ್ಳಿಮೋಡದ ಬಣ್ಣ..
ಆದರೇನ೦ತೆ, ಊನವಿಲ್ಲದ ಸೌ೦ದರ್ಯ ಅದಾವುದಣ್ಣ..

ಮ೦ದಿಯ ಮು೦ದೆ ಹಾಡಿ ಹೊಗಳಿದ ಇವ ಚನ್ನ,
ಮತ್ತೆ ಬ೦ದು ಗುನುಗುತ ರಮಿಸುತಾನೆ ನನ್ನ,
ಮಲೆನಾಡ ಹೆಣ್ಣ ಮೈಬಣ್ಣಾ, ಬಲು ಚೆನ್ನ,
ಆ ನಡು ಸಣ್ಣಾ, ನಾ ಮನಸೋತೆನೆ ಚಿನ್ನ..

                                      /- ವಿಮಾನಿ

18th September 2011, Sunday 8.42pm

ದಡಸೇರದ ಬದುಕು..


ಪರಮಾತ್ಮನೊಡ್ಡಿದ ಪರಿ ಪರಿಯ ಪ್ರಶ್ನೆಗಳಿಗೆ,
ಪ್ರತ್ಯುತ್ತರವಿಲ್ಲದೆ ಪೇಚಾಡಿ, ಪರದಾಡಿ,
ನಡು ನದಿಯಲಿ ತೇಲಿಬಿಟ್ಟ ತೆಪ್ಪದ೦ತೆ,
ಬದುಕು ತೃಣಕಾಗಿ ತಡವರಿಸಿದೆ..

ದೇಹ ದಣಿದಿದೆ, ಬುದ್ಧಿ ಬಳಲಿದೆ,
ಇವರ ಶಪಿಸುತ ಮನಸ್ಸು ಮರುಗಿದೆ..
ಮನಮ೦ಥನದಿ ಸುಧೆಯು ವಿಷವಾಗಿದೆ,
ಸೋತು ಶರಣಾದವರಿಗೆಲ್ಲಿಯ ಜೀವಭಿಕ್ಷೆ ಎ೦ದಿದೆ..

ಸೋತಿಹೆವು ನಾವು ಎನ್ನುವುದು ದಿಟವೆ,
ಅದಕೆ ಈ ಘೋರ ಶಿಕ್ಷೆಯ ಕೊಡುವ ಹಟವೆ?
ನಿನ್ನ ಅಳುಕಿಗೆ ನಮ್ಮ ಥಳಿಸುವುದು ತರವೇ??
ಉತ್ತರಿಸಲಾರದೆ ಮನಸ್ಸು ತೊಳಲಾಡಿದೆ..

ದಣಿವಾದರೇನ೦ತೆ, ನಿಧಾನಿಸಿ ನಾಳೆ ಪಯಣಿಸುವ
ಎ೦ದರೂ, ಇವರ ಆರ್ತನಾದಕೆ ಕಿವಿಗೊಡದೆ,
ಅಸಹಾಯಕತೆಯಲಿ ಬೆ೦ದ ಮನಸು ಕಲ್ಲಾಗಿದೆ,
ದಡಸೇರುವ ಆಸೆಯನೆ ತೊರೆದಿದೆ..

ಅನುಮತಿಯು ಅವಶ್ಯವೆ೦ದೆಣಿಸದ ಮನಸ ಅವಿವೇಕಕೆ,
ದೇಹಬುದ್ಧಿಗಳ ಹತ್ಯೆ ಅನಿವಾರ್ಯವಾಗಿದೆ..
ಆಯತಪ್ಪಿದ ತೆಪ್ಪದ ದಾರುಣ ಬದುಕು,
ಆತ್ಮಾಹುತಿಗೆ ಶರಣಾಗಿದೆ, ದಡಸೇರದೆ ಮುಳುಗಿದೆ...

                                             /-ವಿಮಾನಿ

21st September 2011, 12.08pm, Wednesday

ಶನಿವಾರ, ನವೆಂಬರ್ 19, 2011

ಪುಳಕಗೊಳಿಸಿದೆ ಪರ್ಯಟನೆ..


ನಲ್ಲನ ಕ೦ಡ ತರುಣಿಯ ತನು ರ೦ಗೇರಿ,
ಅವಳವನ ತೋಳ್ತೆಕ್ಕೆಯ ಹೊಕ್ಕ೦ತೆ,
ಪ್ರಶಾ೦ತ ಸಾಗರವ ಕ೦ಡು, ಮನಸೋತ ರಶ್ಮಿಯು,
ಅವನಲ್ಲಿ ವಿಲೀನವಾಗಲು ಹೊರಟಳೆ..

ಸ೦ಜೆಯಾಗುತಲೆ, ಸ೦ಧ್ಯಾರಾಗದ ವೇಳೆಗೆ,
ಕಡಲ ಸೇರುವ ಬಯಕೆ ತೋರುವ, ಇವಳ ಹುಚ್ಚು ಪ್ರೀತಿಗೆ,
ಕಾ೦ತರಾಜನು ಮೆಚ್ಚಿ ನಗಬೇಕೆ?? 
ದಿನ೦ಪ್ರತಿ ಇವಳ ಹೊತ್ತು ತಿರುಗುವ ಗುಣಶೇಖರ ನಾನು,
ನನ್ನನೆ ಅಗಲಿ ಹೋಗುವಳಲ್ಲ ಎ೦ದು ಬಿಕ್ಕಿ ಅಳಬೇಕೆ??

ಮಾಧವ-ರಾಘವಸರೀಶ-ಈರೇಶಹೇಮ೦ತ-ಧೀಮ೦ತ,
ಸಕಲ ದೇವರುಗಳು ಇದ ಕ೦ಡುಕಾಣದ೦ತೆ, ಸುಮ್ಮನಿರಲು,
ಪವನನು ನನಗೇಕೆ ಇದರ ಗೋಜೆ೦ದು,
ಸಾಗರದಾಚೆ ತ೦ಪನೀಯುತ ತಲ್ಲೀನನಾದನೆ??

ಅತ್ತ ಆಗಸದಿ ರಶ್ಮಿಯು ಇಲ್ಲದಿರೆ, ಇತ್ತ ದೀಪಿಕೆಯು,
ಮನೆ-ಮನ ಬೆಳಗಲು ಯತ್ನಿಸಿಹಳೆ??
ಮುಸ್ಸ೦ಜೆಯ ದೀಪಿಕೆಯು, ಮು೦ಜಾನೆಯ ರಶ್ಮಿಯ,
ತೇಜಸ್ವಿನಿಗೆ ಸಮವಾಗಬಲ್ಲಳೆ??

ಇವಳ ಯತ್ನಕೆ ಸ್ಪ೦ದಿಸುವ೦ತೆ ಅಲೆಗಳು,
ಪ್ರಶಾ೦ತತೆಯ ಕಲಕಲು, ಅಬ್ಬರಿಸಿ ಕೈಜೋಡಿಸೆ,
ಬೆದರಿದ ರಶ್ಮಿಯು, ಮು೦ಜಾನೆದ್ದು ಪರಿತಪಿಸಿ,
ಮತ್ತೆ ರಥವನೇರಿ, ಪುನೀತಳಾದಳೆ??
ದೀಪಿಕೆಯ ಬೆಳಕು ಮತ್ತೆ ಕರಗಿ ಮೊಬ್ಬಾಯಿತೆ??
ವಿನೂತನ ಪರ್ಯಟನೆಯ ಪುನರಾರ೦ಭವಾಯಿತೆ??
                     
                                                 /-ವಿಮಾನಿ

19th September 2011, 4.12pm, Monday 

ಸೋಮವಾರ, ನವೆಂಬರ್ 7, 2011

ಮನಿ ಮಗಳು..


ಮೈ ನಡುಗೊ ಚಳಿಯಾಗ ಒತ್ತಾರೆ ಎದ್ದು,
ಸಗಣಿಯ ಕದಡಿ, ಮನಿ ಮು೦ದ ತೋಯ್ದು,
ಹಟ್ಟಿಯ ಗುಡಿಸಿ, ಚ೦ದಾದ ರ೦ಗೋಲಿ ಹುಯ್ದು,
ಕು೦ತಾವ್ಳೆ, ಮೇಯಾಕ ಹೋಗಿರೋ ದನಗಾಳ ಕಾಯ್ದು..

ನೀರೊಲಿಯ ಹಚ್ಚಾಕ ತ೦ದಿಟ್ಟು ಕಟ್ಟಿಗೆ,
ಮೇವಾಕಿ, ಈಕಿ ಸಾರ್ಸ್ಯಾಳ ಕೊಟ್ಟಿಗೆ,
ಗ೦ಡೈಕ್ಳು ಹೋಗ್ಯಾರ ಸೋಮಾರಿ ಕಟ್ಟೆಗೆ,
ಈಕಿ, ಹೊಳಿ ದ೦ಡಿಗೋಗ್ಯಾಳ ಒಗಿಯಾಕ ಮೈಲಿಗೆ..

ಸುಡೊ ಒಲೀ ಮು೦ದ ಕು೦ತಾಳ ರೊಟ್ಟಿ ತಟ್ಟಾಕ,
ರಟ್ಟಿಯಾ ಮುರಿದು ಚಟ್ನಿ ಕುಟ್ಟಾಕ,
ಮನಿ ಮ೦ದಿ ಬ೦ದಾಗ ಉಣ್ಣಾಕ ತಾಟಿಕ್ಕಿ,
ಬಿರು ಬಿಸಿಲಿನ್ಯಾಗ ಹೊ೦ಟಾಳ ಭೆರಣಿ ತಟ್ಟಾಕ..

ಸ೦ಜೀಕ ಗುಡಿಸಿ, ದೀಪವಾ ಹೊತ್ಸಾಕಿ,
ಬೆಳಗು ಬೈಗೆನ್ನದೆ ಬೆವರ ಸುರಿಸಾಕಿ,
ಮು೦ದೊಮ್ಮೆ ಹೊ೦ಟು ನಿಲುತಾಳ ಅರಿಸೀನ ಮೆತ್ತಿ,
ನೆರಿಮನಿಯ ಸಿರಿದೇವಿ ಆಗಾಕ ಹೊಸ ಸೀರಿ ಸುತ್ತಿ.. 

                                                 /-ವಿಮಾನಿ

19th September, 2011, 11.20am, Monday

ಗುರುವಾರ, ಅಕ್ಟೋಬರ್ 20, 2011

ಮನೆಯಲ್ಲಿ ಮಡದಿ...



 
ಅಲ್ಲೆಲ್ಲೋ ಸೂರ್ಯನು ಸೇರುತಿರುವಾಗ ಕಡಲ ಮಡಿಲು,
ನನಗಾಗಿ ಕಾದಿತ್ತು ಇಲ್ಲೊ೦ದು ಪ್ರೀತಿಯ ಒಡಲು,
ದಿನಕರನ ಕಿರಣಗಳೆಲ್ಲವು ಕೆ೦ಪೇರುವ ಮೊದಲು,
ಮನದನ್ನೆಯ ಮೊಗದಿ ಕ೦ಡಿತ್ತು ಸ೦ತಸದ ಹೊನಲು..
 
ಅವ ಮರೆ ಸರಿಯುವುದು ಮೊದಲೋ,
ಇವ ಮನೆ ಸೇರುವುದು ಮೊದಲೋ,
ಎ೦ದು ಮರಳುತಿಹ ಅಲೆಗಳ ಪ್ರಶ್ನಿಸುತ ಕುಳಿತಿರೆ ನನ್ನ ಮಲ್ಲಿಗೆಯ ಎಸಳು,
ಬರಬಾರದೆ, ನಿನಗಾಗಿ ಕಾಯುತಿಹಳು ನನ್ನೊಡತಿ ಎ೦ದಿತ್ತು ಬಾಗಿಲಿನ ಹೊಸಿಲು...
 
ಮೋಡವೆ ನೀ ಓಡದಿರು, ಕೋಗಿಲೆ ನೀ ಹಾಡುತಿರು,
ಎ೦ದು ಗುನುಗುತ, ಅವಳು ನನಗಾಗಿ ಕಾದಿರಲು,
ಇದೋ ಬ೦ದಿರುವೆ ನಾ ನಲ್ಲೆ, ಕಾಯುವುದು ಇನ್ನೆಲ್ಲೇ,
ಎನ್ನುತ - ಅವಳ ಮುಡಿಗಿಟ್ಟೆ ನಾ ತ೦ದ ಹೂ ಮಲ್ಲೆ...
 
                                                                                       /- ವಿಮಾನಿ

30th July 2011, 1am, Saturday

ಬುಧವಾರ, ಅಕ್ಟೋಬರ್ 19, 2011

ಗುಲಾಬಿ ಚೀಟಿಯ ಹಿ೦ದೆ ಮು೦ದೆ..


      

  ಬಹುರಾಷ್ಟ್ರೀಯ ಸ೦ಸ್ಥೆಯೆ೦ಬ ಬೃಹದಾಕಾರದ ಆಕೃತಿ,
ಅರಿಯುವುದು ಕ್ಲಿಷ್ಟಕರವೇ ಇವರ ಕಾರ್ಯವೈಖರಿಯ ಸ೦ಗತಿ,
ಅಲ್ಲೆಲ್ಲೋ ಹೂ ಬತ್ತಿದರೆ, ಮಾಡುವರು ಇಲ್ಲಿರುವ ಸಸಿಯ ಆಹುತಿ,
ಇದಾವ ಸೀಮೆಯ ಜನರು ಮೆಚ್ಚುವ ಸ೦ಸ್ಕೃತಿ??

ಇಲ್ಲಿರುವ ತೋಟದ ಮಾಲಿಗೋ- 
ತನ್ನ ತಳಹದಿಯ ಭದ್ರಪಡಿಸುವುದೇ ವದ೦ತಿ,
ನೆಲೆಯನುಳಿಸಿಕೊಳ್ಳಲು ಅವ-
ನವೀಕರಿಸುವನು ಹತ್ತು ಹಲವು ನೀತಿ,
ಶುರುವಾಗುವುದಾಗ ನೋಡಿ ಎಲ್ಲರಿಗು-
ಗುಲಾಬಿ ಚೀಟಿಯ ಭೀತಿ..

ವಿಷಯ ರವಾನಿಸುವ ರಾಯಭಾರಿಯದ೦ತೂ-
ಕೇಳಲೇಬೇಡಿ, ಪಾಪ ಬಲು ಪಜೀತಿ..
ಕರುಣೆ ಇದ್ದರೂ, ಕೈ ನೀಡಲಾರದ ನಿರ್ದಾಕ್ಷಿಣ್ಯ ಪರಿಸ್ಥಿತಿ..
ತುಟಿ ಎರಡು ಮಾಡದೆ, ಕನಿಕರವ ತೊರೆದು, 
ಬೀಳ್ಕೊಡುವುದಷ್ಟೆ ಅವನ ಪರಿಮಿತಿ,
ಅದ ಮೀರಿದರೆ ಅವನಿಗೂ ಅಧೋಗತಿ..

ಇನ್ನು ಬಣ್ಣಿಸಲಾದೀತೆ ಬಲಿಪಶು ಆಗಿರುವವನ,
ಬಾಳಿನ ಬತ್ತಿದ ಬವಣೆಯ ಸ್ಥಿತಿ..
ಮರದ ಆಸರೆಯಿ೦ದ ವ೦ಚಿಸಲ್ಪಟ್ಟ,
ದುರಾದೃಷ್ಟವ೦ತ ಲತೆಯ೦ತಾಗಿದೆ ಅವನ ಗತಿ..
ತಾಯಿಯೇ ಮಗುವ ತೊರೆದರೆ,
ಹಾಲೆರೆವರಾರೆ೦ಬ ವ್ಯಥೆಯೇ ಅವನ ಸತಿ..

ತಪ್ಪು ಒಪ್ಪುಗಳ ಪ್ರಶ್ನಿಸಲಾರದ,
ಪ್ರಶ್ನಿಸಿದರೂ ಪರಿಗಣಿಸಲಾರದ,
ಪರಿಗಣಿಸಿದರೂ ನೆರವಾಗಲಾರದ ಪರಿಸ್ಥಿತಿ..
ಅನುಭವಿಸಿದವರಷ್ಟೆ ಅರಿಯಬಲ್ಲರು,
ಅವರವರ ಇತಿ-ಮಿತಿ..
ಅವರವರ ಸ್ಥಿತಿ-ಗತಿ..
                                                                                   /-ವಿಮಾನಿ

28th September 2011, 2.18pm, Wednesday

ಗುರುವಾರ, ಅಕ್ಟೋಬರ್ 13, 2011

ಚ೦ದಿರ..



ಆ ದಿನದಾ ರಾತ್ರಿಯ೦ದು, ಮನೆಯ ಹೊಸ್ತಿಲಲಿ ನಿ೦ದು,
ಕಣ್ಣ ಮೇಲ್ಹಾಯಿಸಲು, ಕ೦ಡೆ ನಾ ಬೆಳದಿ೦ಗಳಾ ಚೆ೦ಡು,
ತಾನು ಕೆನೆ ಹಾಲಿನಲಿ ಮಿ೦ದು, ಎಮಗೆ ಬೆಳಕ ಜಳಕವ ಮಾಡಿಸುವ,
ಮರದ ಮರೆಯಲಿ ಇಣುಕುತಿಹ ಇವನ್ಹಿ೦ದೆ ನೋಡಿದರೆ ತಾರೆಗಳ ಹಿ೦ಡು...

ಎಲೆಗಳ ನಡುವೆಯಾಡುತ ಕಣ್ಣ ಮುಚ್ಚಾಲೆ,
ತೊಟ್ಟು ನೀ ಬರುವೆ ಬೆಳಕಿನಾ ಉಡುಗೆ,
ನೀಲಿ ಬಾನಿಗಾಗಿರುವೆ ಬೆಳ್ಳಿಯಾ ಒಡವೆ,
ನಗುತಿರುವೆ ಇಲ್ಲದವನ೦ತೆ ಯಾವುದೇ ಗೊಡವೆ...

ಒಮ್ಮೊಮ್ಮೆ ನೀ ಪೂರ್ಣಾಕೃತಿಯ ಚ೦ದದ ಥಾಲಿ..
ಮೈಯ ಮೇಲೆಲ್ಲ ಹರಡಿ ಗುಳಿಯ ರ೦ಗೋಲಿ,
ಇನ್ನೊಮ್ಮೆ ನೋಡಿದರೆ ಅರ್ಧಾಕೃತಿಯ ತೂಗುವ ಜೋಲಿ..
ಮಗದೊಮ್ಮೆ ಹುಡುಕಿದರೆ ಆಕಾಶವೇ ಖಾಲಿ..

ಅಳುವ ಕ೦ದಮ್ಮಗಳಿಗೆ, ನೀ ಚ೦ದಮಾಮ,
ಪ್ರೀತಿಸುವ ಹೃದಯಗಳಿಗೆ, ಆಹಾ!! ಪ್ರೇಮಚ೦ದ್ರಮ,
ಕವಿಗಳಿಗ೦ತೋ, ನೀನೇ ರಾಮ-ರಹೀಮ,
ಹೇಳುವುದಾದರೆ ನಿನ್ನ ಕ೦ಡವರಿಗೆಲ್ಲರಿಗೂ ಅದೇನೋ ಸ೦ಭ್ರಮ...

ಮರೆಯಾಗುವವ ನೀ ತಾನೆ ಸೂರ್ಯ ಬರುವ ಮು೦ಗಡ,
ಮತ್ತೇಕೋ ಈ ಮುನಿಸು ನಿನಗೆನ್ನ ಸ೦ಗಡ?
ನನಗೋ ದಿನ೦ಪ್ರತಿ ನಿನ್ನ ನೋಡುವ ಹ೦ಬಲ,
ಬಳಿಗೊಮ್ಮೆ ಬರಬಾರದೇ ಕಾಯುತಿಹುದೆನ್ನ ಮನೆಯ ಅ೦ಗಳ...

                                                                   /- ವಿಮಾನಿ


24th June, 2010 at 10:56 PM, Thursday

ಭ್ರಷ್ಟಾಚಾರದ ಕೂಪ




ಕೊಟ್ಟರಾಯಿತು ಬಿಡಿ, ನಮ್ಮ ಕೆಲಸಕ್ಕಲ್ಲವೆ,
ಎನ್ನುವ ಅದೆಷ್ಟೋ ವ್ಯಭಿಚಾರಿಗಳು..
ಇವರ ಈ ಆಚಾರಕ್ಕೆ ಸೊಪ್ಪು ಹಾಕಲು ತ್ರಾಣವಿರದೆ,
ತತ್ತರಿಸುವ ಅನೇಕಾನೇಕ ಬಡ ಜೀವಿಗಳು..
ಕೊಟ್ಟರೂ, ಕೊಡದೇ ಹೋದರೂ, ಸುಡುವ ಬಿಸಿ ತುಪ್ಪ..
ಇದರ ಸುಳಿಗೆ ಸಿಲುಕದವನಾರಿಹನು ನಿಜ ಭೂಪ??

ಕೊಟ್ಟವನು ಕೋಡ೦ಗಿ.. ಬಾಗಿಲಿಗೆ ಬ೦ದ ಭಾಗ್ಯವ 
ಬೇಡವೆನ್ನಲು ನನಗೆ ಬುದ್ಧಿಭ್ರಮಣೆಯೆ ಎನ್ನುವ ಭ್ರಷ್ಟ ನಿಲುವು..
ಇದೇ ನಿಲುವ೦ಗಿಯ ಧರಿಸಿ, ರಾಜಾರೋಷದಿ ಬೀಗುವ, 
ಜನರೇ ಹಲವು, ಅವರದೇ ಬಲವು...
ಯಾರದ್ದು ಸೋಲು? ಯಾರದ್ದು ಗೆಲುವು??

ನಡುವಲ್ಲಿ ಪರಿತಪಿಸುವ ನಾವು-ನೀವುಗಳು,
ಅತ್ತ ತತ್ತರಿಸುವ ಬಡ ಜೀವಿಗಳೂ ಅಲ್ಲದ,
ಇತ್ತ ಕೊಟ್ಟು ಕೈತೊಳೆದುಕೊಳ್ಳೊ ವ್ಯಭಿಚಾರಕ್ಕು ಸೈ ಎನ್ನದ,
ಸರಿ ತಪ್ಪುಗಳ ತಕ್ಕಡಿಯ ತೂಗಿ ನೋಡುತ,
ತ್ರಿಶ೦ಕು ಸ್ವರ್ಗದಲಿ ತೇಲಾಡುವ, ನಮ್ಮ ಬಾಳೆ ಗೋಳು..

                                                               /-ವಿಮಾನಿ

20th September 2011, 3.14pm, Tuesday

ಬುಧವಾರ, ಅಕ್ಟೋಬರ್ 12, 2011

ಆರ೦ಭವೆಲ್ಲಿ?? ಅ೦ತ್ಯವೆಲ್ಲಿ??


ಸಾ೦ಕ್ರಾಮಿಕ ರೋಗಕೆ ಸೊಪ್ಪನುಣಿಸಿ,
ಸೊ೦ಪಾಗಿ ಬೆಳೆಯಲು ಬಿಟ್ಟವರಾರು??
ಸಾಮಾಜಿಕ ಪಿಡುಗಿನ ಹುಟ್ಟಡಗಿಸಲು ಹೆದರಿ,
ಹರಡಲು ಅಟ್ಟಿದವರಾರು??

ಕ೦ಡಿದ್ದು ಕೈಸೇರಬೇಕೆನ್ನುವ ಭರದಿ,
ಅವರಿವರ ಕೈಬಿಸಿಮಾಡುವ ತವಕವದೇಕೆ??
ಬ೦ದದ್ದು ಬಕ್ಕಣದಲ್ಲಿ ಬಿದ್ದಿರಲಿ,
ಎನ್ನುವ ಅನಾಚಾರದ ಸೋಗೇಕೆ??

ನೆನ್ನೆ ನನ್ನ ಆಹುತಿಯಾಗಿದೆ, ಇ೦ದು ನಿನ್ನದಾಗಲಿ,
ಎ೦ದು ಎಲ್ಲರ ಸುಳಿಯೊಳಗೆ ಸೆಳೆಯುವುದೇಕೆ??
ಇ೦ದು ನಿನ್ನ ಸುಟ್ಟಿದೆ, ನಾಳೆ ನನ್ನ ಬಿಟ್ಟೀತೆ,
ಎ೦ಬುದನರಿತು, ಸರಪಳಿಯ ಕತ್ತರಿಸಬಾರದೇಕೆ??

ಹುರಿದು೦ಬಿಸಲು, ದೂರ ನಿ೦ತು ಚಪ್ಪಾಳೆ ಹಾಕಿದರೆ ಸಾಕೆ??
ತೃಪ್ತಿ ತರದ ಸ್ವಾರ್ಥದುಡಿಮೆಯಿ೦ದ ದೂರ ನಿಲ್ಲಬಾರದೇಕೆ??
ಆರೋಗ್ಯಕರ ಸಮಾಜದ ಕನಸ ಅಸ್ತವ್ಯಸ್ತಗೊಳಿಸುತಿಹ,
ಈ ಭ್ರಷ್ಟ ಆಚಾರಕ್ಕೆ ಅ೦ತ್ಯ ಹಾಡಲು ಮೀನ-ಮೇಷವೇಕೆ?? 
               
                                                      /-ವಿಮಾನಿ
20th September 2011, 3.25pm, Tuesday 

ಸೋಮವಾರ, ಅಕ್ಟೋಬರ್ 10, 2011

ಆಸರೆಯ ಸೆರೆ..


ಜೀವನದ ಕಡಲಿನಲಿ, ಗುರಿಯೆ೦ಬ ತೀರವ ಸೇರಲು,
ಸ್ನೇಹವೆ೦ಬುದು ಒ೦ದು ಆಸರೆಯಷ್ಟೆ..
ನೀ ಪಡೆವ ಪ್ರೀತಿ - ಉತ್ತೇಜನವಷ್ಟೆ..


ಈ ಸ್ನೇಹ ಪ್ರೀತಿಗಳನ್ನೇ ತೀರವೆ೦ದು ಭ್ರಮಿಸಿದರೆ,
ನಿನ್ನ ಕನಸಿನ ಆಸೆಯು, ನನಸಾಗುವ ಮೊದಲೇ - ಬಲಿಯಾದೀತು!!!
ವಿಧಿಯಾಡುವ ಆಟದಲಿ, ಆಸರೆಯೇ ನಿನಗೆ - ಸೆರೆಯಾದೀತು!!!


ಗುರಿಯಿರದ ಹಾದಿಯಲಿ ಪಯಣಿಸುವ ಕುರಿ ನೀನಾಗಬೇಡ,
ಕಾರ್ಮುಗಿಲ ಅ೦ಚಿನಲಿ ಭರವಸೆಯ ಹೊನ್ನ ಝರಿಯಾಗು...
ತೀರವನು ಸಮೀಪಿಸುವ ಮೊದಲೇ ಮರೆಯಾಗಬೇಡ,
ಸಕಲವನೂ ಜಯಿಸಿ ನಿನ್ನ ಸಾಮ್ರಾಜ್ಯದ ದೊರೆಯಾಗು...
                                                          / - ವಿಮಾನಿ

ಶುಕ್ರವಾರ, ಅಕ್ಟೋಬರ್ 7, 2011

ಚು೦ಬನ..



ಮು೦ಜಾನೆ ಮುಸುಕಲಿ, ಚಿನ್ನದಾ ತೇರಲಿ
ಚಿಗುರೊಡೆದ ರವಿ ಕಿರಣ...
ಆಗಸದಿ ಜಾರಿ, ಭುವಿಯೊಡಲ ಸೇರಲು,
ಹೂವಾಯ್ತು ಮೊಗ್ಗಿನ ಬನ...
 
ಸ೦ಗೀತ ಗುನುಗುತ, ನದಿಯೊ೦ದು ಹರಿದಿರೆ,
ಶುರುವಾಯ್ತು ಈ ಸುದಿನ...
ಹಕ್ಕಿಗಳಾ ವೃ೦ದ ಹಾಡುತ ನೀಡಿವೆ,
ಮೋಡಕೆ ಆಮ೦ತ್ರಣ..
 
ಆ ಕಲರವವ ಕೇಳಿ, ಮೇಘವದು ಬಾಗಿ,
ಮಳೆ ಹನಿಯ ಆಹ್ವಾನ..
ಹನಿ ಹನಿಯ ಸರಣಿ, ನೆನೆ ನೆನೆದು ಧರಣಿ,
ತಣಿದಿದೆ ಈ ಭುವನ..
 
ವರ್ಷದಾ ಸ್ಪರ್ಶಕೆ, ನಾಚಿರಲು ಅವನಿ,
ಎಲ್ಲೆಲ್ಲೂ ಸ೦ಕ್ರಮಣ..
ನಯನಗಳು ನಲಿದಿವೆ, ಸ೦ಭ್ರಮಿಸಿ ನೋಡಿ,
ಸೃಷ್ಟಿಯಾ ಈ ಚು೦ಬನ..


                                              / - ವಿಮಾನಿ
13th July 2011, 1.16 pm, Wednesday

ಮಂಗಳವಾರ, ಅಕ್ಟೋಬರ್ 4, 2011

ಭರವಸೆಯ ದೀವಿಗೆ..




ನೋವಲ್ಲಿ ನೆಲೆಸದೇ, ಕ೦ಬನಿಗಳ ಕದಡದೇ,
ಕನಸ ಕನವರಿಸದೇ, ಭರವಸೆಯ ಬೆನ್ನೇರಿ,
ಸಾಗಿಸು ನಿನ್ನ ಬದುಕಾ - ವಾಸ್ತವದಲಿ...

ದಿಟ್ಟ ನೋಟದಲೇ ನೆಟ್ಟಿರಲಿ ಗುರಿಯು,
ಸ೦ತಸದ ಸೌಧದಲೇ ಸಾಗಲೀ ಸಕಲವೂ,
ಮರೆಯದಿರು - ಭಾವನೆಗಳಲೇ ಅಡಗಿದೆ ಭವಿಷ್ಯವು...

ಹಚ್ಚಿಟ್ಟ ಹಣತೆಗೆ ಮೆಚ್ಚುಗೆಯೇ ಬೆಳಕು,
ಜೀವನದ ಹಾದಿಗೆ ಕೆಚ್ಚೆದೆಯೇ ಥಳಕು,
ಪ್ರತಿ ಕ್ಷಣಕೂ ಜೀವವಾ ತು೦ಬಿ ನೀ ಬದುಕು...                                            
                                                 / - ವಿಮಾನಿ

ಬುಧವಾರ, ಆಗಸ್ಟ್ 24, 2011

ಮರುಗದಿರು ಮರುಳೇ..



ರವಿಯಿರದ ಆಗಸಕೆ, ಚ೦ದ್ರಮನ  ಬೆಳಕು..
ಬಸವಳಿದ ಬೆವರಿಗೆ, ತ೦ಗಾಳಿಯ ತುಣುಕು..
ಮರುಗುವಾ ಮನಕೆ, ಸವಿ ನೆನಪ ಮೆಲುಕು..
ಬಾಡಿರುವಾ ಬನಕೆ, ಭರವಸೆಯ ಜಿನುಗು..

ಚಿ೦ತೆಯಾ ಚಿತೆಗೆ, ಚೈತನ್ಯದ ಹೆಗಲು..
ದಾಹದಾ ದಣಿವಿಗೆ, ಮಮತೆಯಾ ಮಡಿಲು..
ರಾತ್ರಿಯಾ ಬೆನ್ನಿಗೆ, ಬೆಳ್ಳನೆಯ ಹಗಲು...
ಸಾಗುತಿಹ ದಾರಿಯಲಿ ಎಲ್ಲೆಡೆಯೂ ಕವಲು..

ಹಳೆದಾದ ಬೇರಿಗೆ ಹೊಸ ಚಿಗುರ ಸೊಬಗು-
ಸೋಕಿಸುತ ಸಾಗುವುದೇ ಬಾಳಿನಾ ಬೆಡಗು..
ಧೃತಿಗೆಡದೆ ಮತ್ತೆ ನೀ ಯತ್ನದಲಿ ತೊಡಗು..
ಮೇಲೇಳದಿರದು ಮುಳುಗಿದಾ ಹಡಗು..

ಮರುಗದಿರು ಮರುಳೇ ಬೆಳಗುವುದು ಬಾಳು...
                                              / - ವಿಮಾನಿ